ನಾನು ನನ್ನ ಆತ್ಮೀಯ ಸ್ನೇಹಿತ ಬೆಳಗಿನ ಜಾವ 5.00 ಗಂಟೆಗೆ ಬೆಂ.ವಿ.ವಿ.ಯ ಆವರಣದಲ್ಲಿ ಫಿಟ್ನೆಸ್ ತರಗತಿಗೆ ಹೋಗುತ್ತೇವೆ. ಈ ತರಗತಿಯಲ್ಲಿ ನಮಗೆ ಇನ್ನೊಬ್ಬ ರಾಮು ಎಂಬುವವನ ಪರಿಚಯವಾಯಿತು. ನಮ್ಮಿಬ್ಬರಿಗೂ ರಾಮು ಆತ್ಮೀಯನಾದ. ಸುಮಾರು 1 ವರ್ಷಗಳ ಕಾಲ ಒಡನಾಟದಲ್ಲಿ ನಾವು ಮೂರೂ ಜನರು ಆತ್ಮೀಯ ಸ್ನೇಹಿತರಾದೆವು. ಕೆಲವೊಮ್ಮೆ ನಾವು ಮೂರೂ ಜನರು ಭಾನುವಾರಗಳಂದು ಬೆಂಗಳೂರು ವಿಶ್ವವಿದ್ಯಾಲಯದ ಕಾಡಿನಲ್ಲಿ 10 ಕಿಲೋಮೀಟರ್ ಗಳ ನಡಿಗೆಯ ನಂತರ ಎಳನೀರು, ಊಟ ಎಲ್ಲವೂ ಆಗುತ್ತಿದ್ದವು. ರಾಮು ಒಂದು ದಿನ ನನ್ನಲ್ಲಿಗೆ ಬಂದು ನನಗೆ ತುರ್ತಾಗಿ 1 ಲಕ್ಷ ಸಾಲ ಬೇಕು ಎಂದು ಕೇಳಿದ. ನನಗೆ ಇತ್ತೀಚೆಗೆ ಪರಿಚಯವಾದ ರಾಮುವಿನ ಮೇಲೆ ಸ್ವಲ್ಪ ನಂಬಿಕೆ ಬರಲಿಲ್ಲ. ಒಂದೆರಡು ದಿನ ಕಾಲಾವಕಾಶ ಕೊಡು, ನನಗೆ ಸಾಧ್ಯವಾದರೆ ಹಣ ಕೊಡುತ್ತೇನೆ ಎಂದೆ. ಹಾಗೆಯೇ 1 ವರ್ಷದ ಆತ್ಮೀಯತೆಯಲ್ಲಿ ರಾಮುವಿಗೆ ಹಣ ಕೊಡುವುದಿಲ್ಲ ಎಂದು ಹೇಳುವುದಕ್ಕೆ ಮನಸ್ಸಿಗೆ ಕಷ್ಟಕರವಾಗುತ್ತಿತ್ತು. 1 ವರ್ಷದ ಒಡನಾಟದಲ್ಲಿ ರಾಮುವಿನ ಮನೆ, ಊರು, ಕೆಲಸ ಯಾವುದೂ ಗೊತ್ತಿರಲಿಲ್ಲ. ಬೆಳಗಿನ ಹೊತ್ತು ಬೆಂಗಳೂರು ಆವರಣದಲ್ಲಿ ಸಿಗುವುದು ಬಿಟ್ಟರೆ ಅವನ ಬಗ್ಗೆ ಬೇರೆ ಮಾಹಿತಿ ನನ್ನಲ್ಲಿರಲಿಲ್ಲ. ಹಾಗಾಗಿ ಅವನ ಮೇಲೆ ಸ್ವಲ್ಪ ಅಪನಂಬಿಕೆ ಇತ್ತು. ಒಂದೆರಡು ದಿನ ಯೋಚನೆ ಮಾಡಿದೆ. 1 ವರ್ಷಗಳ ಕಾಲ ಸ್ನೇಹಿತನಾಗಿದ್ದ ಅವನ ಮೇಲೆ ಹಣ ಕೊಡುವಾಗ ಅವನ ಊರು, ಕೆಲಸದ ಬಗ್ಗೆ ವಿಚಾರಿಸಿದರೆ ಸರಿ ಇರುವುದಿಲ್ಲ ಎಂದು ಅನಿಸತೊಡಗಿತ್ತು. 1 ವರ್ಷ ಒಡನಾಡಿದ ರಾಮುವಿನ ಕಷ್ಟ ಕಾಲಕ್ಕೆ ಹಣ ಇಲ್ಲ ಎಂದು ಹೇಳುವುದು ಹೇಗೆ ಎಂಬ ಚಿಂತೆ ಕಾಡತೊಡಗಿತು. ಈ ಗೊಂದಲದ ಬಗ್ಗೆ ನಾನು ನನ್ನ ಆತ್ಮೀಯ ಸ್ನೇಹಿತ ಶೇಖರನಿಗೆ ಹೇಳಿದೆ ಹಾಗೂ ರಾಮುವಿಗೆ ಹಣ ಕೊಡುವುದಕ್ಕೆ ನನಗೆ ನಂಬಿಕೆ ಬರುತ್ತಿಲ್ಲ, ಏನು ಮಾಡುವುದು ಎಂದು ಸಲಹೆ ಕೇಳಿದೆ. ಆಗ ಶೇಖರ ಒಂದೇ ಮಾತಿಗೆ ರಾಮು ಅತ್ಯಂತ ಪ್ರಾಮಾಣಿಕ ಹಾಗೂ ಆತ್ಮೀಯ ಸ್ನೇಹಿತ. ನಾವು ಭಾನುವಾರಗಳು ಊಟ ಮಾಡಿದರೆ, ಎಳನೀರು ಕುಡಿದರೆ ನಮ್ಮ ಕೈಯಿಂದ ಬಿಲ್ ಕೊಡಿಸದೆ ಯಾವಾಗಲೂ ಅವನೇ ಹಣ ನೀಡುತ್ತಿದ್ದ. ಅವನು ಮೋಸ ಮಾಡಲು ಹೇಗೆ ಸಾಧ್ಯ? ನಮ್ಮ ಕನ್ನಡ ಸಮ್ಮೇಳನದಲ್ಲಿ ರಾಮು ಬೆಳಿಗ್ಗೆ 5 ಗಂಟೆಗೆ ಬಂದು ನಮ್ಮೊಂದಿಗೆ ಕಷ್ಟಪಟ್ಟು ದುಡಿದಿದ್ದ. ಅವನ ಬಗ್ಗೆಯೇ ಹೀಗೆ ಅನುಮಾನಿಸುವುದು ಸರಿಯಿಲ್ಲ ಎಂದನು ಶೇಖರ. ನಿನಗೆ ಅವನ ಬಗ್ಗೆ ಅಷ್ಟೊಂದು ಅನುಮಾನವಿದ್ದರೆ ನೀನು ಹಣ ಕೊಡು, ಅವನೇನಾದರೂ ಮೋಸ ಮಾಡಿದರೆ 50000/- ಹಣ ನಾನು ವಾಪಸ್ಸು ಕೊಡುತ್ತೇನೆ ಎಂದನು ಶೇಖರ. ಅಕಸ್ಮಾತ್ ಮೋಸ ಹೋದರೆ ಇಬ್ಬರದೂ 50000/- ಮೋಸ ಹೋಗಲಿ, ಇಬ್ಬರೂ ಮೋಸ ಹೋಗೋಣ ಎಂದನು. ನಾನು ರಾಮುವಿಗೆ ಹಣ ಕೊಟ್ಟೆನು. 3 ತಿಂಗಳಿಗೆ ವಾಪಸ್ಸು ಕೊಡುತ್ತೇನೆ ಎಂದ ರಾಮು 4 ತಿಂಗಳಾದರೂ ಹಣ ವಾಪಸ್ಸು ಕೊಡಲಿಲ್ಲ. ನಾನು ಶೇಖರನಿಗೆ ರಾಮು ಹಣ ವಾಪಸ್ಸು ಕೊಡುತ್ತಿಲ್ಲ ಎಂದು ಹೇಳಿದೆ. ಅದಕ್ಕೆ ಶೇಖರ ನಾನು ಕೊಟ್ಟ ಮಾತಿನಂತೆ 50000/- ವಾಪಸ್ಸು ಕೊಡುತ್ತೇನೆ ಎಂದು ತಕ್ಷಣ ಹೇಳಿದ. ನಾನು ಶೇಖರನಿಗೆ ನೀವು ಹಣ ಕೊಡಲಿ ಎಂದು ಈ ವಿಷಯ ಹೇಳುತ್ತಿಲ್ಲ. ಆದರೆ ನಾವು ಅಂದು ತೆಗೆದುಕೊಂಡ ನಿರ್ಧಾರ ಮೂರ್ಖತನದ್ದು. ಇದರಿಂದ ಪಾಠ ಕಲಿಯಬೇಕು ಎಂದು ತಿಳಿಯಲು ಹೇಳಿದೆ ಎಂದೆ. ಮರುದಿನ ನನ್ನ ಖಾತೆಗೆ ಶೇಖರನ ಖಾತೆಯಿಂದ 50000/- ಹಣ ವರ್ಗಾವಣೆಯಾಗಿತ್ತು. ನಾನು ಶೇಖರನಿಗೆ ದೂರವಾಣಿ ಕರೆ ಮಾಡಿ ಯಾಕೆ ಹಣ ವರ್ಗಾವಣೆ ಮಾಡಿದೆ ನಾನೇನು ಹಣ ಕೇಳಲಿಲ್ಲವಲ್ಲ ನಿನಗೆ. ಅವತ್ತು ನಾನು ರಾಮುವಿಗೆ ಹಣ ಕೊಡುವಾಗ ಕೇವಲ ಸಲಹೆ ಕೇಳಿದೆನಷ್ಟೆ. ನೀವು ನನಗೆ ಹಣ ಕೊಡಲಿ ಎಂಬುದು ನನ್ನ ಭಾವನೆ ಆಗಿಲ್ಲ ಎಂದು ಹೇಳಿದೆ ಹಾಗೂ ನೀವು ವರ್ಗಾವಣೆ ಮಾಡಿರುವ ಹಣವನ್ನು ವಾಪಸ್ಸು ಮಾಡುತ್ತೇನೆ ಎಂದೆ. ಅದಕ್ಕೆ ಶೇಖರ ದಯಮಾಡಿ ಹಣವನ್ನು ವಾಪಸ್ಸು ವರ್ಗಾವಣೆ ಮಾಡಬೇಡ, ಅಕಸ್ಮಾತ್ ರಾಮು ಹಣ ವಾಪಸ್ಸು ನೀಡಿದ ದಿನ ನೀನು ನನ್ನ ಹಣ ವಾಪಸ್ಸು ನೀಡುವೆಯಂತೆ ಎಂದರು. ಎಷ್ಟು ಹೇಳಿದರೂ ಅವರು ಹಣ ವಾಪಸ್ಸು ಮಾಡಿಸಿಕೊಳ್ಳಲು ಒಪ್ಪಲಿಲ್ಲ. 1 ವರ್ಷ 3 ತಿಂಗಳಾಯಿತು. ರಾಮುವಿಗೆ ಹತ್ತು ಹಲವು ಬಾರಿ ಕರೆ ಮಾಡಿದರೂ ಅವನು ಕರೆಯನ್ನು ಸ್ವೀಕರಿಸುತ್ತಿಲ್ಲ, ಅವನ ಮನೆ ಗೊತ್ತಿಲ್ಲ, ಅವನ ಊರು ಗೊತ್ತಿಲ್ಲ, ಅವನು ಹಣ ವಾಪಸ್ಸು ಕೊಡುತ್ತಾನೋ, ಕೊಡುವುದಿಲ್ಲವೋ ಎಂಬುದರ ಬಗ್ಗೆ ಇನ್ನೂ ಅನುಮಾನ. ಒಂದು ಕಡೆ ಹಣವನ್ನು ಪಡೆದ ಸ್ನೇಹಿತ ಕರೆಯನ್ನೂ ಸ್ವೀಕರಿಸದೆ ತಲೆಮರೆಸಿಕೊಂಡ, ಇನ್ನೊಂದು ಕಡೆ ಸಲಹೆ ಕೇಳಿದ್ದಕ್ಕೆ ಕೊಟ್ಟ ವಾಕ್ಯಕ್ಕೆ ತಪ್ಪದಂತೆ 50000/- ಹಣ ಬೇಡವೆಂದರೂ ವಾಪಸ್ಸು ನೀಡುತ್ತಾನೆ. ಇಬ್ಬರೂ ಸ್ನೇಹಿತರೇ. ಆದರೆ ರಾಮುವಿನಂತಹವರೂ ಇರುತ್ತಾರೆ, ಶೇಖರನಂತಹವರೂ ಇರುತ್ತಾರೆ. ಬದುಕು ಪಾಠ ಕಲಿಸುತ್ತಾ ಹೋಗುತ್ತದೆ. ಶೇಖರನಂತಹ ಸ್ನೇಹಿತರು ವಿರಳ, ಬದುಕಿನ ಜಂಜಾಟದಲ್ಲಿ ಶೇಖರನಂತಹ ಸ್ನೇಹಿತರನ್ನು ಹುಡುಕಿಕೊಂಡು ಸ್ನೇಹ ಕಾಪಾಡಿಕೊಳ್ಳಬೇಕು.
ಸ್ನೇಹ ಎಂಬುದು ಕನ್ನಡಿಯಂತೆ ನಕ್ಕರೆ ನಕ್ಕು, ಅತ್ತಾಗ ಅಳುವುದು ನೆರಳಂತೆ ಹಿಂದೆ ಬರುವುದು ನಗುವಾಗ ಅಳುತ, ಅಳುವಾಗ ನಗುತ ನಟಿಸಿದರೆ ಆಪತ್ತು ತರುವುದು ವಜ್ರದಂತೆ ಜೋಪಾನ ಮಾಡಿ ಕಾಪಾಡು ಹಣದ ಆಸೆಗೂ ಮೀರಿ ಪ್ರೀತಿ ಕೊಡು ನನ್ನಂತೆ ಅವನೆಂದು ಮಮತೆ ನೀಡು ಗೊತ್ತಾಗದೆ ತಪ್ಪು ಮಾಡಿದರೆ ಕ್ಷಮಿಸಿಬಿಡು ದುರಾಸೆ ಇರುವವನೆಂದು ತಿಳಿದರೆ ದೂರವಿಡು ರಮೇಶ ಎಂ.ಎಚ್. ನಿರಾತಂಕ
0 Comments
Leave a Reply. |
Categories
All
RAMESHA NIRATANKA ಉಲ್ಲಾಳು ವಾರ್ಡಿನ ಸಮಸ್ತ ನಾಗರೀಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಸಮಾಜದ ವಿವಿಧ ಕ್ಷೇತ್ರದ 50,000 ಕ್ಕೂ ಹೆಚ್ಚು ಸದಸ್ಯರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಒಡನಾಟದಲ್ಲಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯಗಳಲ್ಲಿ ನಿರಾತಂಕ ಸಂಸ್ಥೆಗೆ ಬೆಂಬಲವನ್ನು ನೀಡುತ್ತಿದ್ದಾರೆ. ತಾವೂ ಕೂಡ ನಮ್ಮೊಂದಿಗೆ ಕೈ ಜೋಡಿಸಲು ಮತ್ತು ಬೆಂಬಲಿಸಲು “8088433026” ನಂಬರ್ಗೆ “NIRATHANKA” ಎಂದು ಸಂದೇಶವನ್ನು ಕಳುಹಿಸಿಕೊಡಬಹುದು.
|